ಬುವಿಯೊಳಗೆ ಜೀವಸೃಷ್ಟಿ ಎಲ್ಲಾಯ್ತು?


ಭೂಮಿಯಲ್ಲಿ ಜೀವಜಗತ್ತು ಸೃಷ್ಟಿಯಾಗಿ, ಬೆಳೆಯುತ್ತಿದೆ ಎಂಬುದು ಗೊತ್ತು. ಯಾವುದೇ ಒಂದು ಕಾಲದಲ್ಲಿ ಇಲ್ಲಿ ಸೃಷ್ಟಿ ಕಾರ್ಯ ಶುರುವಾಗಿದೆ ಎಂಬುದೂ ಗೊತ್ತು. ಆದರೆ ಸೃಷ್ಟಿಕಾರ್ಯ ಶುರುವಾದದ್ದು ಎಲ್ಲಿ? ಹೇಗೆ ಶುರುವಾಯ್ತು? ಎಲ್ಲಾ ಜೀವಿಗಳೂ ಒಟ್ಟಿಗೇ ಸೃಷ್ಟಿಯಾದವೇ? ಅಥವಾ ವಿಕಾಸದ ಪಥದಲ್ಲಿ ಒಂದು ಜೀವಿ ಇನ್ನೊಂದಾಗಿ ರೂಪಾಂತರಗೊಂಡಿತೇ? ವೈಜ್ಞಾನಿಕ ಜಗತ್ತಿನಲ್ಲಿ ಇವುಗಳು ಮಿಲಿಯನ್ ಡಾಲರ್ ಪ್ರಶ್ನೆಗಳು. ಸೃಷ್ಟಿಯ ಬಗ್ಗೆ ಒಬ್ಬೊಬ್ಬರದು ಒಂದೊಂದು ವಾದ; ಸೃಷ್ಟಿ ರಹಸ್ಯವನ್ನು ಪರಿಪೂರ್ಣವಾಗಿ ತೆರೆದಿಡುವುದಕ್ಕೆ ಯಾವ ವಾದಕ್ಕೂ ಸಾಧ್ಯವಾಗಿಲ್ಲ.
ಅಪಾರವಾದ ಜಲರಾಶಿಯಲ್ಲಿ ಅರ್ಥಾತ ಅತಿಯಾದ ತಾಪಮಾನದಿಂದ ಕೂಡಿದ್ದ ಸಮುದ್ರತಟದಲ್ಲಿ ಜೀವಕುಡಿ ಸೃಷ್ಟಿಯಾಯಿತು ಎಂದು ಇದುವರೆಗಿನ ವೈಜ್ಞಾನಿಕ ಸಿದ್ಧಾಂತಗಳು ಪ್ರತಿಪಾದಿಸುತ್ತಾ ಬಂದಿದ್ದವು. ಆದರೆ ಈಗ ಇದು ಸರಿಯಾದ ವಾದವಲ್ಲ, ಸಾಗರದ ತಟದಲ್ಲಿ ಜೀವಜಗತ್ತಿನ ಉದಯವಾಗಿಲ್ಲ. ಬದಲಾಗಿ ಹಿಮಾವೃತಗೊಂಡಿರುವ ಧ್ರುವಪ್ರದೇಶಗಳಲ್ಲಿ ಜೀವಿಗಳು ಸೃಷ್ಟಿಯಾದವು ಎಂದು ಹೊಸ ಸಂಶೋಧನೆಯೊಂದು ಹೇಳಿದೆ.
ಭೂಮಿಯ ಧ್ರುವಪ್ರದೇಶಗಳಲ್ಲಿ ಸಾಗರಮುಖಿಯಾಗಿ ಬೆಳೆದಿರುವ ಸಮುದ್ರ ನೀರ್ಗೋಲುಗಳು (ಸೀ ಸ್ಟಾಲಕ್ಟೈಟ್ಸ್) ಅಥವಾ ಮಂಜಿನ ಕೊಳವೆಗಳಿರುವ ಪ್ರದೇಶದಲ್ಲಿ ಜೀವಜಗತ್ತು ಸೃಷ್ಟಿಯಾಯಿತು. ಉದ್ದಕ್ಕೆ ಮಂಜಿನರಾಶಿಯ ಅಡಿಯಲ್ಲಿ ನೂರಾರು ಯಾರ್ಡ್‌ಗಳಷ್ಟು ಉದ್ದಕ್ಕೆ ಬೆಳೆಯಬಲ್ಲ ನೀರ್ಗೋಲುಗಳನ್ನು ಅಧ್ಯಯನ ಮಾಡುವುದೂ ಕಷ್ಟ. ಈ ಕಾರಣದಿಂದಾಗಿ ನೀರ್ಗೋಲುಗಳ ಬಗ್ಗೆ ವೈಜ್ಞಾನಿಕ ಜಗತ್ತು ಅಷ್ಟಾಗಿ ತಿಳಿದುಕೊಂಡಿಲ್ಲ ಎನ್ನುತ್ತಾರೆ ವಿಜ್ಞಾನಿ ಬ್ರೂನೋ ಎಸ್ಕ್ರಿಬಾನೋ.
ನೀರ್ಗೋಲುಗಳು ಬೆಳೆಯುವ ಪ್ರಕ್ರಿಯೆಯ ಬಗ್ಗೆ ವಿಸ್ತೃತವಾದ ಅಧ್ಯಯನ ನಡೆಸಿದ ಬ್ರೂನೋ ನೇತೃತ್ವದ ವಿಜ್ಞಾನಿಗಳ ತಂಡ, ನೀರ್ಗೋಲುಗಳ ಬಗ್ಗೆ ಅಚ್ಚರಿ ಹುಟ್ಟಿಸುವಂಥ ಮಾಹಿತಿಗಳನ್ನು ಕಲೆ ಹಾಕಿದೆ. ಮಂಜಿನ ರಾಶಿಯ ತಳದಲ್ಲಿ ಹುಟ್ಟಿ ಅಲ್ಲಿಂದ ಮತ್ತೆ ಆಳಕ್ಕೆ ಬೆಳೆಯುತ್ತಾ ಹೋಗುವುದೇ ನೀರ್ಗೋಲುಗಳ ವೈಶಿಷ್ಟೃ. ಮಾತ್ರವಲ್ಲ, ಇದುವೇ ಜೀವಜಗತ್ತಿನ ಸೃಷ್ಟಿಗೆ ಪ್ರೇರಕವಾಗಿ ಪರಿಣಮಿಸಿದೆ ಎನ್ನುತ್ತಾರೆ ವಿಜ್ಞಾನಿಗಳು.
ಕೋಟ್ಯಂತರ ವರ್ಷಗಳ ಹಿಂದೆ ಭೂಮಿಯಲ್ಲಿ ಜೀವಜಗತ್ತು ಸೃಷ್ಟಿಯಾಗುವುದಕ್ಕೆ ಬೇಕಾದ ವಾತಾವರಣವನ್ನು ಸೃಷ್ಟಿಸಿದ್ದೇ ಈ ನೀರ್ಗೋಲುಗಳು. ಜೀವಾಸ್ತಿತ್ವ ಹೊಂದಿರುವ ಇತರ ಗ್ರಹ ಅಥವಾ ಆಕಾಶಕಾಯಗಳಲ್ಲೂ ಜೀವಪೋಷಕ ವಾತಾವರಣ ಸೃಷ್ಟಿ ಮಾಡಿದ್ದೂ ಇವುಗಳೇ. ಭೂಮಿಯ ಉಪಗ್ರಹ ಚಂದ್ರ, ಗುರುಗ್ರಹದ ಎರಡು ಉಪಗ್ರಹಗಳಾದ ಗ್ಯಾನಿಮೇಡ್ ಮತ್ತು ಕ್ಯಾಲಿಸ್ಟೋ, ಶನಿಯ ಉಪಗ್ರಹ ಟೈಟಾನ್ ಮತ್ತಿತರ ಆಕಾಶಕಾಯಗಳಲ್ಲಿ ಮಂಜಿನಿಂದಾವೃತವಾಗಿರುವ ಸಾಗರದ ಅಸ್ತಿತ್ವವನ್ನು ವೈಜ್ಞಾನಿಕ ಜಗತ್ತು ಈಗಾಗಲೇ ಕಂಡುಕೊಂಡಿದೆ. ಈ ಆಕಾಶಕಾಯಗಳಲ್ಲಿ ಜೀವಾಸ್ತಿತ್ವ ಇದೆಯೇ ಅಥವಾ ಯಾವುದಾದರೊಂದು ಕಾಲದಲ್ಲಿ ಜೀವಾಸ್ತಿತ್ವ ಹೊಂದಿದ್ದವೇ ಎಂಬುದನ್ನು ಅಧ್ಯಯನ ಮಾಡುವುದಕ್ಕೆ ನೀರ್ಗೋಲುಳು ಮಹತ್ವದ ಅಂಶವಾಗಿ ಪರಿಣಮಿಸಲಿವೆ ಎಂಬುದು ವಿಜ್ಞಾನಿಗಳ ವಾದ.

Comments

  1. ಜ್ಞಾನ ಅನಂತ
    ಅಧ್ಯಯನ ದಿಗಂತ
    ಬದುಕು ಅಯಸ್ಕಾಂತ
    ಮನುಕುಲ ಜೀವಂತ.
    ರಾಶಿಮೈ


    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು