ಕಂದಮ್ಮನಿಗೆ ಎಲ್ಲವೂ ಅರ್ಥವಾಗುತ್ತೆ!
ಮಕ್ಕಳು ಮೂರೇ ತಿಂಗಳು ಪ್ರಾಯವಾಗಿದ್ದಾಗಲೇ ಅಮ್ಮನ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಸಾಮಥ್ರ್ಯ ಹೊಂದಿರುತ್ತವಂತೆ. ಒಂದು ಜೀವ ತಾಯಗರ್ಭದಲ್ಲಿ ಮೊಳಕೆಯೊಡೆಯಬೇಕು ಎಂದಾದರೆ ಅಲ್ಲಿ ತಂದೆಯ ರೇತಸ್ಸು (ವೀರ್ಯ) ಮತ್ತು ತಾಯಿ ಆತ್ಮಭೂಯದ (ಅಂಡಾಣು ಎನ್ನಬಹುದು) ಮಿಲನವಾಗಬೇಕು. ಗರ್ಭದಲ್ಲಿರುವ ಮಗುವಿನ ನಾಭಿಯಿಂದ ಹೊರಟಂಥ ಕರುಳಬಳ್ಳಿ ತಾಯಿಯ ಜೊತೆಗೆ ನಂಟು ಬೆಳೆಸುತ್ತದೆ. ತಾಯಿಯ ಆತ್ಮಭೂಯ ಮತ್ತು ತಂದೆಯ ರೇತಸ್ಸಿನಲ್ಲಿ ಹಲವು ತಲೆಮಾರುಗಳ ವಂಶವಾಹಿಗಳು ಹರಿಯುವುದರಿಂದ ಸಂಬಂಧ ಬಹಳ ದೂರದವರೆಗೆ ವಿಸ್ತರಿಸುತ್ತದೆ.
ಮಕ್ಕಳ ಗ್ರಹಣಶಕ್ತಿ ಎಷ್ಟಿರುತ್ತದೆ? ಯಾವಾಗಿನಿಂದ ಮಕ್ಕಳಿಗೆ ಈ ಶಕ್ತಿ ಲಭ್ಯವಾಗುತ್ತದೆ? ಎಂಬೆಲ್ಲ ವಿಚಾರಗಳ ಬಗ್ಗೆ ಹಲವು ವರ್ಷಗಳಿಂದ ಜಿಜ್ಞಾಸೆ ಇದೆ. ಮಕ್ಕಳಿಗೆ ಬುದ್ಧಿ ಬರುವಾಗ ಮೂರ್ನಾಲ್ಕು ವರ್ಷ ಆಗುತ್ತೆ. ಅಲ್ಲಿಯವರೆಗೆ ಆವರಿಗೆ ಏನೂ ಅರ್ಥ ಆಗಲ್ಲ ಅಂತ ಒಂದು ವಾದ ಹೇಳಿದರೆ, ನಮ್ಮ ಪುರಾಣಗಳು ಮಗು ಅಮ್ಮನ ಗರ್ಭದಲ್ಲಿರುವಾಗಲೇ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತದೆ ಎಂದು ಹೇಳುತ್ತವೆ. ಹೀಗಿರುವಾಗ ಯಾವುದು ಸರಿ ಎಂಬ ಗೊಂದಲವೂ ಕಾಡುವುದು ಸಹಜ. ಪುರಾಣಗಳನ್ನು, ವೇದ, ಉಪನಿಷತ್ತುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದವರು, ಸಾಧ್ಯವಿದ್ದರೂ ಅವುಗಳತ್ತ ಕಣ್ಣೆತ್ತಿಯೂ ನೋಡದವರು, ವೇದ, ಉಪನಿಷತ್ತುಗಳು, ಪುರಾಣಗಳೆಂದರೆ ಕಟ್ಟುಕಥೆಗಳೆಂದು ಭಾವಿಸುವವರು ಮೊದಲಿನ ವಾದವನ್ನೇ ಒಪ್ಪಬಹುದು. ವೇದ, ಉಪನಿಷತ್ತುಗಳು ಮತ್ತು ಪುರಾಣಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವವರು ಖಂಡಿತಕ್ಕೂ ಮೊದಲ ವಾದನನ್ನು ಸಾರಾಸಗಟು ತಳ್ಳಿಹಾಕುತ್ತಾರೆ.
ವಾದ ಪ್ರತಿವಾದಗಳು ಒತ್ತಟ್ಟಿಗಿರಲಿ. ಸದ್ಯ ವಿಜ್ಞಾನಿಗಳು ತಾಯಿ-ಮಗುವಿನ ಸಂಬಂಧ ಮತ್ತು ಮಗುವಿನ ಗ್ರಹಣ ಶಕ್ತಿಯ ವಿಚಾರದಲ್ಲಿ ಹೊಸದೊಂದು ಸಂಶೋಧನೆ ಮಾಡಿದ್ದಾರೆ. ಲಂಡನ್ನ ಕಿಂಗ್ಸ್ ಕಾಲೇಜಿನ ಮನಶ್ಶಾಸ್ತ್ರ ಸಂಸ್ಥೆಯ ಸಂಶೋಧಕರು ನಡೆಸಿರುವ ಈ ಸಂಶೋಧನೆಯ ಪ್ರಕಾರ ಮಕ್ಕಳು ಮೂರೇ ತಿಂಗಳು ಪ್ರಾಯವಾಗಿದ್ದಾಗಲೇ ಅಮ್ಮನ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಸಾಮಥ್ರ್ಯ ಹೊಂದಿರುತ್ತವಂತೆ. ಇತ್ತೀಚಿನ ದಿನಗಳಲ್ಲಿ ಅಮ್ಮನ ಸ್ಥಾನಕ್ಕೆ ಬಡ್ತಿ ಪಡೆಯುತ್ತಿರುವ ಯುವತಿಯರು ಹೆಚ್ಚಾಗಿ ಮೊಬೈಲ್ಗೇ ಅಂಟಿಕೊಂಡಿರುತ್ತಾರೆ. ಮಗುವಿಗೆ ಅರ್ಥವಾಗುವುದಿಲ್ಲ ಎಂದು ತಮಗಿ ತೋಚಿದ್ದನ್ನೆಲ್ಲಾ ಮಾತಾಡುತ್ತಾರೆ. ಆದರೆ ಮಕ್ಕಳು ಅವನ್ನೆಲ್ಲ ತಮ್ಮದೇ ಆದ ಮಾರ್ಗದಲ್ಲಿ ಅರ್ಥ ಮಾಡಿಕೊಳ್ಳುತ್ತಿರುತ್ತಾರೆಂಬುದು ಅವರಿಗೆ ಗೊತ್ತೇ ಆಗುವುದಿಲ್ಲ ಎನ್ನುತ್ತದೆ ಸಂಶೋಧನೆ.
ಮೆದುಳಿನ ಸ್ಕ್ಯಾನ್
ಇದನ್ನೆಲ್ಲ ಈ ಸಂಶೋಧಕರು ಕಂಡುಕೊಂಡದ್ದು ಮಕ್ಕಳ ಮೆದುಳನ್ನು ಸ್ಕ್ಯಾನ್ ಮಾಡುವ ಮೂಲಕ. ಮೂರರಿಂದ ಏಳು ತಿಂಗಳು ಪ್ರಾಯದ ಮಕ್ಕಳು ನಿದ್ದೆ ಮಾಡುತ್ತಿದ್ದಾಗ ಅವರಿಗೆ ವಿವಿಧ ರೀತಿಯ ಧ್ವನಿಗಳನ್ನು ಕೇಳಿಸಲಾಯಿತು. ಅದೇ ಸಂದರ್ಭದಲ್ಲಿ ಮೆದುಳನ್ನು ಸ್ಕ್ಯಾನ್ ಮಾಡಿ, ಈ ಎಲ್ಲ ಶಬ್ದಗಳಿಗೆ ಅವರ ಮೆದುಳು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ವಿವರಗಳನ್ನು ಪಡೆದುಕೊಂಡರು. ಮೊದಲಿಗೆ ಮನುಷ್ಯನ ಧ್ವನಿ ಮತ್ತು ಇತರ ಶಬ್ದಗಳ ವ್ಯತ್ಯಾಸವನ್ನು ಗುರುತಿಸಲು ಮಕ್ಕಳು ಶಕ್ತರಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸಿದರು. ಅಂದರೆ ಮಕ್ಕಳಿಗೆ ನೀರು ಬೀಳು, ನದಿ ಹರಿಯುವ, ಮನುಷ್ಯರು ಕೆಮ್ಮುವ... ಇಂಥ ಶಬ್ದಗಳನ್ನು ಕೇಳಿಸಿದರು. ಮನುಷ್ಯರ ಧ್ವನಿಗೆ ಮಕ್ಕಳು ಹೆಚ್ಚು ಸ್ಪಂದಿಸುತ್ತಿದ್ದುದು ಆಗ ಗೊತ್ತಾಯಿತು.
ಇಷ್ಟಕ್ಕೇ ಸಂಶೋಧಕರು ಸುಮ್ಮನಾಗಲಿಲ್ಲ. ಭಾವನಾತ್ಮಕ ಶಬ್ದಗಳಿಗೆ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ತಿಳಿದುಕೊಂಡರೆ. ನಗುವನ್ನು ಕೇಳಿಸಿದರು, ಆಳುವನ್ನು ಕೇಳಿಸಿದರು, ಎರಡೂ ಅಲ್ಲದ ಧ್ವನಿಯನ್ನೂ ಕೇಳಿಸಿದರು. ಮಗುಮನಸ್ಸು ತಕ್ಷಣ ಮತ್ತು ತೀವ್ರವಾಗಿ ಸ್ಪಂಧಿಸಿದ್ದು ಅಳುವ ಶಬ್ದಕ್ಕೆ. ಮಗು ಇಷ್ಟು ಬೇಗ ಸ್ಪಂದಿಸುತ್ತದೆ ಎಂಬುದನ್ನು ತಿಳಿದು ಅಚ್ಚರಿಯಾಯಿತು ಎನ್ನುತ್ತಿದ್ದಾರೆ ಸಂಶೋಧಕರು. ಜರ್ಮನಿಯಲ್ಲಿ ನಡೆದಿದ್ದ ಇನ್ನೊಂದು ಸಂಶೋಧನೆ ಕೇವಲ 5 ದಿನದ ಮಗುವಿನ ಅಳುವಿನಲ್ಲಿ ತನ್ನ ಮಾತೃನೆಲದ ನಂಟು ಗಾಢವಾಗಿ ಕಾಣುತ್ತದೆ ಎನ್ನುತ್ತದೆ. ಜರ್ಮನಿಯ ಮಗುವಿನ ಅಳುವಿನಲ್ಲಿಯೂ ಫ್ರೆಂಚ್ ಮಗುವಿನ ಅಳುವಿನಲ್ಲಿಯೂ ಭಾವನಾತ್ಮಕವಾಗಿ ಭಾರೀ ವ್ಯತ್ಯಾಸ ಇರುತ್ತದೆ. ಅಷ್ಟೇ ಅಲ್ಲ, ಒಂದೇ ದೇಶದ ವಿವಿಧ ಪ್ರಾಂತ್ಯದ ಮಗುವಿನ ಅಳುವಿನ ಹಿಂದಿರುವ ಭಾವುಕತೆಗಳೂ ಭಿನ್ನವಾಗಿರಬಹುದು. ಇಷ್ಟೇ ಅಲ್ಲ, ಆಗಷ್ಟೇ ಜನಿಸಿದ ಮಕ್ಕಳು ತಮ್ಮ ಅಮ್ಮನ ನಡತೆಮ ವರ್ತನೆಯನ್ನು ಅನುಕರಿಸುತ್ತಾರೆ ಎನ್ನುತ್ತದೆ ಈ ಸಂಶೋಧನೆ.
ಇದೇ ಸಂಶೋಧನೆ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ನಮ್ಮ ಮಹಾಭಾರತದಲ್ಲಿ ಬರುವಂಥ ಅಭಿಮನ್ಯುವಿನ ಕಥೆಗೆ ಸಾಕ್ಷ್ಯ ಒದಗಿಸುತ್ತದೆ. ಅಭಿಮನ್ಯುವಿನ ವಿಚಾರ ಗೊತ್ತಲ್ಲ, ತಾಯಿ ಸುಭದ್ರೆಯ ಗರ್ಭದಲ್ಲಿದ್ದಾಗಲೇ ಚಕ್ರವ್ಯೂಹ ಪ್ರವೇಶಿಸುವುದನ್ನು ಕಲಿತವ. ಸುಭದ್ರೆಯ ಕೋರಿಕೆಯ ಮೇರೆಗೆ ಶ್ರೀಕೃಷ್ಣ ಚಕ್ರವ್ಯೂಹ ಪ್ರವೇಶವನ್ನು ವಿವರಿಸಿದ. ಸ್ವಲ್ಪ ಹೊತ್ತಿಗೆ ಸುಭದ್ರೆ ನಿದ್ದೆ ಹೋದಳು. ಆದರೆ ಹೂಂಗುಟ್ಟುವ ಧ್ವನಿ ಮಾತ್ರ ಕೇಳುತ್ತಿತ್ತು. ಅಚ್ಚರಿಯಿಂದ ನೋಡಿದ ಕೃಷ್ಣನಿಗೆ ಇದು ಗರ್ಭದಲ್ಲಿರುವ ಮಗುವಿನದ್ದೇ ಪ್ರತಿಕ್ರಿಯೆ ಎಂಬುದು ಗೊತ್ತಾಗಿ, ಚಕ್ರವ್ಯೂಹ ಪ್ರವೇಶಿಸಿ ಅಲ್ಲಿಂದ ವಾಪಸಾಗುವುದನ್ನು ಕೂಡಾ ಹೇಳಿಕೊಟ್ಟರೆ ಮುಂದೊಂದು ದಿನ ತನ್ನ ಬುಡಕ್ಕೇ ಈ ಬಾಲಕ ಕೊಳ್ಳಿ ಇಡುತ್ತಾನೆ ಎಂದು ಭಾವಿಸಿ ಚಕ್ರವ್ಯೂಹದ ರಹಸ್ಯವನ್ನು ಅರ್ಧಕ್ಕೇ ನಿಲ್ಲಿಸುತ್ತಾನೆ.
ಇದು ಕಟ್ಟುಕಥೆ ಎಂಬ ಭಾವನೆ ಹಲವರಲ್ಲಿರಬಹುದು. ಆದರೆ ಇದು ನಿಜ, ಗರ್ಭದಲ್ಲಿರುವಾಗಲೇ ಮಗು ತನ್ನ ತಂದೆ, ತಾಯಿ, ಕುಟುಂಬದವರ ಜೊತೆಗೆ ಸ್ಪಂದಿಸುತ್ತದೆ. ಅವರ ಮಾತುಗಳನ್ನು ಅರ್ಥ ಮಾಡಿಕೊಳುತ್ತದೆ ಎಂಬುದನ್ನು ಜಪಾನಿನ ವಿಜ್ಞಾನಿಗಳು ಸಾಧಿಸಿ ತೋರಿಸಿದ್ದಾರೆ.
ಸಂಬಂಧ ಎಂದರೆ
ನಮ್ಮಲ್ಲಿರು ತಪ್ಪು ಕಲ್ಪನೆಯೇ ನಾವು ವೇದ, ಉಪನಿಷತ್ತು ಮತ್ತು ಪುರಾಣಗಳನ್ನು ಕಟ್ಟುಕಥೆಗಳು, ದೇವತೆಗಳನ್ನು ಮೆಚ್ಚಿಸುವ ಮಂತ್ರಗಳು ಎಂದು ಭಾವಿಸುವಕ್ಕೆ ಮತ್ತು ಸಂಬಂಧ ಶುರುವಾಗುವುದು ಮಗು ಜನಿಸಿದ ನಂತರ ಎಂಬ ಭಾವನೆ ಹೊಂದಿರುವುದಕ್ಕೆ ಕಾರಣವಾಗಿದೆ. ಒಂದು ಆತ್ಮ ಹೊಸ ಹೊಸ ಶರೀರಧಾರಿಯಾಗಿ ಹಲವು ಜನ್ಮಗಳಲ್ಲಿ ಭೂಮಿಗೆ ಬರುತ್ತದೆ. ಹಾಗೆ ಬರುವಾಗ ತನ್ನ ಹಿಂದಿನ ಜನ್ಮದ ಎಲ್ಲ ಜ್ಞಾನವೂ ಆದಕ್ಕಿರುತ್ತದೆ. ಅದನ್ನು ವಿವರಿಸುವದಕ್ಕೆ ಮಾತ್ರ ಶಕ್ತವಾಗಿರುವುದಿಲ್ಲ. ಕೆಲವೊಂದು ಅಪೂವ ಪ್ರಸಂಗಗಳಲ್ಲಿ ಅಂದರೆ, ಜನನ ಮರಣ ಚಕ್ರದಿಂದ ಅರ್ಥಾತ್ ಮೃತ್ಯುವಿನ ಹಿಡಿತದಿಂದ ಪಾರಾಗುವಂಥ ಮಟ್ಟಕ್ಕೆ ಆತ್ಮವು ಜ್ಞಾನ ಸಂಪಾದನೆ ಮಾಡಿದೆ ಎಂದಾದರೆ ಅದು ತನ್ನ ಹಿಂದಿನ ಜನ್ಮಗಳ ಎಲ್ಲ ಜ್ಞಾನವನ್ನೂ ಪ್ರದರ್ಶಿಸುವುದಕ್ಕೆ ಶಕ್ತವಾಗಿರುತ್ತದೆ ಎನ್ನುತ್ತವೆ ವೇದಗಳು.
ಇನ್ನು ಒಂದು ಜೀವ ತಾಯಗರ್ಭದಲ್ಲಿ ಮೊಳಕೆಯೊಡೆಯಬೇಕು ಎಂದಾದರೆ ಅಲ್ಲಿ ತಂದೆಯ ರೇತಸ್ಸು (ವೀರ್ಯ) ಮತ್ತು ತಾಯಿ ಆತ್ಮಭೂಯದ (ಅಂಡಾಣು ಎನ್ನಬಹುದು) ಮಿಲನವಾಗಬೇಕು. ಒಂದು ಭೌತಕಾಯ ಅಥವಾ ಶರೀರ ಎಂದರೆ ಅಲ್ಲಿ ಆ ಶರೀರಕ್ಕೆ ಸಂಬಂಧಪಟ್ಟ ಎಂಟು ಮಂದಿ ರಕ್ಷಕ ದೇವತೆಗಳಿರುತ್ತಾರೆ. ಈ ದೇವತೆಗಳು ಜಗತ್ತಿನ ರಕ್ಷಕರೆಂದು ಖ್ಯಾತಿ ಪಡೆದ ಇಂದ್ರ, ವರುಣ, ಸೋಮ, ರುದ್ರ, ಪರ್ಜನ್ಯ, ಯಮ, ಮೃತ್ಯು, ಈಶಾನ್ಯ ಎಂಬ ದೇವತೆಗಳ ಪ್ರತೀಕ. ಈ ಎಂಟೂ ದೇವತೆಗಳು ತಾಯಿಯ ಆತ್ಮಭೂಯದಲ್ಲಿ ಅರ್ಥಾತ್ ಅಂಡಾಣುವಿನಲ್ಲಿ ಮೊದಲೇ ನೆಲೆಸಿರುತ್ತಾರೆ. ವೀರ್ಯ ಮತ್ತು ಅಂಡಾಣುಗಳ ಮಿಲನವಾದಾಗ ಈ ದೇವತೆಗಳು ಜಾಗೃತಗೊಂಡು, ಹೊಸ ಶರೀರ ಪ್ರವೇಶಿಸುವುದಕ್ಕೆ ಸಿದ್ಧವಾಗುತ್ತವೆ. ಈ ದೇವತೆಗಳ ಪ್ರತಿರೂಪವೇ ಬಾಯಿ, ಕಣ್ಣು, ಕಿವಿ, ಮೂಗು, ಚರ್ಮ, ಜನನೇಂದ್ರಿಯ, ಮನಸ್ಸು ಮತ್ತು ನಾಭಿ.
ಇಲ್ಲಿ ಮೃತ್ಯುವಿನ ಪ್ರತಿರೂಪದ ದೇವತೆಯಿರುವುದು ನಾಭಿಯಲ್ಲಿ. ಒಂದು ಜೀವಿ ಬೆಳೆಯುವುದಕ್ಕೆ, ದೇಹಕ್ಕೆ ಪ್ರಾಯವಾಗುವುದಕ್ಕೆ ಮತ್ತು ಯಾವುದೇ ಒಂದು ಜೀವಿ ಅಥವಾ ವಸ್ತು ರೂಪಾಂತರ ಹೊಂದುವುದಕ್ಕೆ ಈ ಮೃತ್ಯುವೇ ಕಾರಣ. ಹಾಗಾಗಿಯೇ ಗರ್ಭದಲ್ಲಿರುವ ಮಗುವಿನ ನಾಭಿಯಿಂದ ಹೊರಟಂಥ ಕರುಳಬಳ್ಳಿ ತಾಯಿಯ ಜೊತೆಗೆ ನಂಟು ಬೆಳೆಸುತ್ತದೆ. ತಾಯಿಯ ಆತ್ಮಭೂಯ ಮತ್ತು ತಂದೆಯ ರೇತಸ್ಸಿನಲ್ಲಿ ಹಲವು ತಲೆಮಾರುಗಳ ವಂಶವಾಹಿಗಳು ಹರಿಯುವುದರಿಂದ ಸಂಬಂಧ ಬಹಳ ದೂರದವರೆಗೆ ವಿಸ್ತರಿಸುತ್ತದೆ. ಗರ್ಭದಲ್ಲಿರುವ ಮಗು ಎಲ್ಲವನ್ನೂ ಅರ್ಥ ಮಾಡಿಕೊಳ್ಳುವುದಕ್ಕೂ ಇದುವೇ ಕಾರಣ.
ನಿಮ್ಮ ಈ ಬ್ಲಾಗ್ ತುಂಬಾ ಚೆನ್ನಾಗಿದೆ :) ನಿಮ್ಮ ಪ್ರಯತ್ನಕ್ಕೆ ಅಭಿನಂದನೆ :)
ReplyDelete