ಮುಕ್ತಿರೂಪ ಅಯ್ಯಪ್ಪ

ಪರಬ್ರಹ್ಮ ತತ್ವ ಸಾಕ್ಷಾತ್ಕಾರದ ಬೆಳಕು ನೀಡೋ
ಲೌಕಿಕದ ಮೋಹ ಕಳೆವ ಗುರುವೇ ಅಯ್ಯಪ್ಪ ||ಪ||

ಶ್ರೀಹರಿಯು ಚೆಂದದಲಿ ಮೋಹಿನಿಯಾಗೆ
ಮದನಾಂತಕ ಹರನು ಮೋಹಿತನಾಗಿ
ಯೋಗಶಕ್ತಿಗಳೆರಡು ಕೂಡಿ ಒಂದಾಗಿ
ರೂಪ ತಳೆದ ಮಹಾಶಕ್ತಿ ಸ್ವಾಮಿ ಅಯ್ಯಪ್ಪ ||೧||

ಯೋಗದಲಿ ಯೋಗಿ ಯೋಗೇಶ್ವರನು
ಯೋಗನಿದಿರೆಯಲಿ ಹರಿ ಯೋಗಮಾಯೆ
ಯೋಗ ಯೋಗಗಳು ಯೋಗದಲಿ ಏಕವಾಗೆ
ಜನಿಸಿದ ಮಹಾಯೋಗಿಯೇ ಸ್ವಾಮಿ ಅಯ್ಯಪ್ಪ ||೨||

ಸರ್ವಗುಣಸಂಪನ್ನ ಭಾವುಕನು ಹರಿಯು
ತಪೋನಿರತ ಭಾವಾತೀತನೂ ಹರನು
ಭಾವ ಗುಣಗಳೆಲ್ಲವು ತಪದಲೊಂದಾಗಿ
ಗುಣಭಾವದಾಚೆಯ ಪರತತ್ವ ನೀನೇ ಅಯ್ಯಪ್ಪ ||೩||

ಗುಣಾವಗುಣಗಳೆಲ್ಲವ ಮನದೊಳಿಟ್ಚು
ಮನುಜಕುಲ ತಾ ನಿರ್ಭಾವುಕತೆಯ ಬಿಟ್ಟು
ತಾನೆಂಬ ಅಹಂಭಾವದೊಳು ಬೀಗಿರಲು
ಕಣ್ತೆರೆದು ಅರಿವ ಬೆಳಕು ಮೂಡಿಸೋ ಅಯ್ಯಪ್ಪ ||೪||

ಭೂಮಿ ಭೂಮಿಯನೆ ಸೆಳೆದು ಕೂಡಿ
ತುಂಡು ಇಳೆಗೆ ಬಂಧ ಮುರಿದು ಕಾಡಿ
ಸೌಧ ಕಟ್ಟಿ ಬಂಧಿಯಾಗಿಕೊಂಬ ಜನಕೆ
ಭೂಮಿ ಉಸಿರ ನಂಟು ಕಾಣಿಸೋ ಅಯ್ಯಪ್ಪ ||೫||

ಬೆಳ್ಳಿ ಬಂಗಾರ ವೈಢೂರ್ಯ ರಾಶಿ
ಸಂಪದವ ಶೇಖರಿಪ ಮನದ ಖುಷಿ
ಮರುಳು ಚಿತ್ತದಲಿ ಅರಿವು ಮೂಡಿಸೋ
ಬಕುತಿ ಸಂಪದ ಅನಂತವದು ಅಯ್ಯಪ್ಪ ||೬||

ಮೋಹ ಮೋಹವೆಲ್ಲ ಕ್ಷಣಿಕವೋ
ಬಂಧ ಸಂಬಂಧವೆಲ್ಲ ಮರುಳೋ
ಮೋಹ ಬಂಧದ ಮರುಳ ಕಳೆದು
ಮನುಜ ಮನಕೆ ಬೆಳಕಾಗೋ ಅಯ್ಯಪ್ಪ ||೭||

ಬಂಧ ಮೋಹ ಪಾಶ ಕಳೆದು
ಇಹದ ವಾಂಛೆಗಳೆಲ್ಲ ಅಳಿದು
ಶರಣು ಶರಣೆನುತಲಿ ಪದಕೆರಗೆ
ಕೈಲಾಸ ವೈಕುಂಠಕೆ ಒಯ್ಯೋ ಅಯ್ಯಪ್ಪ ||೮||

ಹರಿಹರ ಸುತ ಮಹಾಶಾಸ್ತ್ರನೇ ಅಯ್ಯಪ್ಪ
ಮಂತ್ರವೇದಿ ಮಹಾವೇದಿ ತಪಸ್ವಿಯೇ ಅಯ್ಯಪ್ಪ
ಅಶ್ವಾರೂಢ ಗಜಾರೂಢ ಸಿಂಹಾರೂಢನೇ ಅಯ್ಯಪ್ಪ
ಪಾಪನಾಶಕ ಭಕ್ತವತ್ಸಲನೇ ಶರಣಂ ಅಯ್ಯಪ್ಪ ||೯||

ಪದ ಪದಾಭಿವಂದನೆಯೂ ಅಯ್ಯಪ್ಪ
ಅಕ್ಷರ ಹೂವ ಮಾಲೆ ನಿನಗೇ ಅಯ್ಯಪ್ಪ
ಪಯಣಿಗನ ಕಾವ್ಯವೇ ನೈವೇದ್ಯ ಅಯ್ಯಪ್ಪ
ಚೇತನಕೆ ಮುಕುತಿ ಪ್ರಸಾದ ನೀಡೋ ಅಯ್ಯಪ್ಪ ||೧೦||

- ಪ್ರಕಾಶ ಪಯಣಿಗ

Comments

  1. ಸ್ವಾಮಿಯೇ ಶರಣ೦ ಅಯ್ಯಪ್ಪ🙏🙏🙏

    ReplyDelete
  2. *ಗುಣಾವಗುಣಗಳೆಲ್ಲವ* *ಮನದೊಳಿಟ್ಚು*
    *ಮನುಜಕುಲ ತಾ ನಿರ್ಭಾವುಕತೆಯ ಬಿಟ್ಟು*
    *ತಾನೆಂಬ ಅಹಂಭಾವದೊಳು ಬೀಗಿರಲು*
    *ಕಣ್ತೆರೆದು ಅರಿವ ಬೆಳಕು ಮೂಡಿಸೋ ಅಯ್ಯಪ್ಪ*

    ಕೆಲವರಿಗೆ ಹಣದ ಮದ...
    ಕೆಲವರಿಗೆ ಸೌ೦ದರ್ಯದ ಮದ...
    ಕೆಲವರಿಗೆ ಅಧಿಕಾರದ ಮದ..
    ಕೆಲವರಿಗೆ ಏನೂ ಇಲ್ಲದಿದ್ದರೂ ಮದ...
    *ಮಾಲೆ ಹಾಕಿರುವಾಗ ಕೆಲವರು* *ಇವೆಲ್ಲದರಿ೦ದಲೂ ಹೊರಬಂದು ಭಕ್ತಿಭಾವದಿ೦ದ ತಮ್ಮ ಸಹಸ್ವಾಮಿಗಳ ಕಾಲಿಗೆ ನಮಸ್ಕರಿಸಲೇಬೇಕು... (ಇದು ನಾವು ಮಾಲೆ ಹಾಕಿರುವಾಗ ಪಾಲಿಸಿಕೊಂಡು ಬಂದ ಸಂಪ್ರದಾಯ).*

    ಮನುಜನ ಮನದ ಅಹಂಕಾರ ಅಳಿಸಲು ಅಯ್ಯಪ್ಪ ಸ್ವಾಮಿಗಿ೦ತ ದೇವರು ಬೇಕೇ????

    *॥ಸ್ವಾಮಿಯೇ ಶರಣ೦ ಅಯ್ಯಪ್ಪ ॥*
    🙏🏻🙏🏻🙏🏻

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು