ಎಚ್ಚರಾಗೆನ್ನ ಕೃಷ್ಣ
(ಆತ್ಮರೂಪಿ ಶ್ರೀಕೃಷ್ಣನನ್ನು ಜಾಗೃತಗೊಳಿಸಲು ಪ್ರಯತ್ನಿಸುವ ಈ ಕೀರ್ತನೆಯ ಸುಮಧುರ ಗಾಯನ ಕೇಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ...
ಜ್ಞಾನನೇಸರನು ಹೊಂಗಿರಣ ಬೀರಿಹನು
ನಿದ್ದೆ ತಿಳಿದೇಳು ತಡವೇಕೆ ಕೃಷ್ಣ ||ಪ||
ಮನೋ ಮಂದಿರದ
ಹೊನ್ನ ಪಲ್ಲಂಗದಲಿ
ಕಪಟ ನಿದಿರೆ ಸಾಕಿನ್ನು
ಎಚ್ಚರಾಗೆನ್ನ ಕೃಷ್ಣ ||೧||
ಜಗವ ಪಾಲಿಪ ಹರಿಯೆ
ಗುಡಿಯ ಬಾಗಿಲು ತೆರೆಯೆ
ಸುಪ್ರಭಾತವು ನಿನಗೆ
ಎಚ್ಚರಾಗೆನ್ನ ಕೃಷ್ಣ ||೨||
ವಿಷಮೊಲೆಯ ಕುಡಿದವನೆ
ಬಕುತಿ ಸುಧೆಯ ನೀಡುವೆನು
ಸ್ವೀಕರಿಸಿ ಹರಸಲು ಬೇಗ
ಎಚ್ಚರಾಗೆನ್ನ ಕೃಷ್ಣ ||೩||
ಘೋರ ಮಳೆ ಸುರಿಯೆ
ಗಿರಿಯ ಬೆರಳಲಿ ಎತ್ತಿ
ಗೋಕುಲವ ಕಾಯಲು ಬೇಗ
ಎಚ್ಚರಾಗೆನ್ನ ಕೃಷ್ಣ ||೪||
ಕಾಲಿಯನ ಗರ್ವ ಮುರಿದು
ಯಮುನೆ ಒಡಲ ತೊಳೆದು
ಜೀವ ಜಗದಿ ನಲಿಯೆ
ಎಚ್ಚರಾಗೆನ್ನ ಕೃಷ್ಣ ||೫||
ಕಂಸಾದಿ ಅಸುರರ ಬಡಿದು
ಹಿಂಸಾದಿಗಳೆಲ್ಲವ ಕಳೆದು
ಮಂದಿರದ ದೀಪ ಬೆಳಗೆ
ಎಚ್ಚರಾಗೆನ್ನ ಕೃಷ್ಣ ||೬||
ಗಡಿಗೆ ಗಡಿಗೆ ಬಕುತಿ
ಹಾಲು ಮೊಸರು ಬೆಣ್ಣೆ
ಪಾಲು ಮಾಡದೆ ಕೊಡುವೆ
ಎಚ್ಚರಾಗೆನ್ನ ಕೃಷ್ಣ ||೭||
ಬಂಧನದ ಕತ್ತಲೆಯು
ಕಂದನನು ಕಾಡಿಹುದು
ಬೆಳಕ ಲೋಕ ತೋರಲು
ಎಚ್ಚರಾಗೆನ್ನ ಕೃಷ್ಣ ||೮||
ನೀ ನೆಲೆಸಿಹ ಚೇತನ
ಹಸಿರು ನಂದನವನ
ಮುರಲಿ ಗಾನಕೆ ಕಾದಿಹುದು
ಎಚ್ಚರಾಗೆನ್ನ ಕೃಷ್ಣ ||೯||
ಗೀತ ಗಾಯನ ಮಾಡಿ
ಹೊಳೆಯೆ ಆತ್ಮ ಮಣಿ
ವಿಶ್ವರೂಪದ ಲೀಲೆಯಾಡಲು
ಎಚ್ಚರಾಗೆನ್ನ ಕೃಷ್ಣ ||೧೦||
ಕಾವ್ಯ ಕನ್ನಿಕೆಯ ಲಾಸ್ಯಕೆ
ಪದ ಪುಂಜಗಳ ತಾಳಕೆ
ಪಯಣಿಗನ ಅಕ್ಷರ ನಲಿಯೆ
ಎಚ್ಚರಾಗೆನ್ನ ಕೃಷ್ಣ ||೧೧||
- ಪ್ರಕಾಶ ಪಯಣಿಗ
Comments
Post a Comment