ಜಯತು ಜಯತು ವಿಷ್ಣುಮೂರ್ತಿ
ಮರುಗದಿರು ಮರುಗದಿರು ಓ ಮಾನವ
ಇಳೆಗೆ ಬೆಳಕಾಗಿ ಇಳಿದಿಹನು ಮಾಧವ ||ಪ||
ಕುಂಟಾರಿನ ಪುರದಲ್ಲಿ
ಪಾಡಿಬರುವ ಮನದಲ್ಲಿ
ಬೆಳಕು ತಾನಾಗಿ ಹೊಳೆದಿಹನು
ಭುವಿಸಿರಿಗೊಡೆಯ ಜಗದೀಶ ||೧||
ಶ್ಯಾಮಲೆಯ ಮಡಿಲಲ್ಲಿ
ಪಯಸ್ವಿನಿಯ ತಟದಲ್ಲಿ
ಕರುಣದಿಂದಲಿ ಪೊರೆಯುತಾ
ನೆಲೆಸಿಹನು ದೇವದೇವ ವಿಷ್ಣುದೇವ ||೨||
ಜಲನಿಧಿಯ ಅಲೆಯಲ್ಲಿ
ತರುಲತೆಯ ಕೊರಳಲ್ಲಿ
ಝುಳು ಝುಳು ನಾದ
ಕುಹೂ ಕುಹೂ ಗಾನ ಹರಿ ನಿನ್ನ ಧ್ಯಾನ ||೩||
ನೇಸರನ ಕಿರಣದಲಿ
ತಂಬೆಲರ ಸ್ಪರ್ಶದಲಿ
ಗೋವಿಂದ ನಿನ್ನ ನಾಮ
ಅದು ಓಂಕಾರ ನಾದ ಶ್ರೀಕಾರ ನಾದ ||೪||
ಪುರಜನರು ಮನಸಿನಲಿ
ಭಕ್ತಿ ಭಾವ ತುಂಬುತಲಿ
ಭಜಿಸಿ ಪ್ರಾರ್ಥನೆಯ ಮಾಡುತಿರೆ
ಕೃಪೆದೋರುವೆ ಓ ಜಗನ್ನಾಥನೇ ||೫||
ಅಗಣಿತ ಭಕ್ತರ ಸಲಹುತಲಿ
ಮಮತಾ ಸುಧೆ ಹರಿಸುತಲಿ
ತಂದೆ ನೀ ತಾಯಿ ನೀ ಬಳಗ ನೀ
ಜಗದೇಕ ಬಂಧು ಕರುಣಾ ಸಿಂಧು ||೬||
ಶರಣಾಗತರನು ಕಾಯುತಲಿ
ವಾಂಛಿತ ಫಲವೀಯುತಲಿ
ಭಕ್ತವತ್ಸಲ ನೀನಿರಲು
ದಾಸ ನಾ ನಿನಗೆ ಆದಿದೇವನೆ ||೭||
ಕರಮುಗಿದು ವಂದಿಪೆನು
ಹರಿ ನಿನ್ನ ಚರಣದಲಿ
ಕಾಪಾಡು ನೀ ಎನ್ನ ಮರುಕದಲಿ
ಮದುಸೂದನ ನಾರಾಯಣ ಲಕ್ಷ್ಮೀನಾರಾಯಣ ||೮||
ಬಾಲ ಭಾಷೆಯಲೀ ಕವನ
ನಾರಾಯಣನ ಗಾನ
ಕುಣಿಕುಣಿದು ಕೇಳಿ ಪಯಣಿಗನ
ಹರಸೋ ಕುಂಟಾರು ಪುರಾಧೀಶ ||೯||
- ಪ್ರಕಾಶ ಪಯಣಿಗ
ಸುಂದರ ಬರಹ🙏😀
ReplyDeleteNice Lines my friend
ReplyDelete