ಎತ್ತ ಕಡೆ ಸಾಗುತ್ತಿದ್ದೇವೆ ನಾವು?
ಪಾವನೆ ಎನಿಸಿಕೊಂಡಿದ್ದ ಗಂಗೆ ಕಲಿಷಿತಗೊಂಡಿದ್ದಾಳೆ. ಯಮುನೆಯ ಸ್ಥಿತಿಯೇನೂ ಭಿನ್ನವಾಗಿಲ್ಲ. ಗೋದಾವರಿಯ `ವರಿ' ನಿಜಕ್ಕೂ ಆತಂಕಕಾರಿ. ಸರಸ್ವತಿ ಸ್ವರ ಉಡುಗುತ್ತಿದೆ. ನರ್ಮದೆಯ ನೆಮ್ಮದಿಯೇ ಹಾಳಾಗಿದೆ. ಸಿಂಧು ಬತ್ತುತ್ತಿದ್ದಾಳೆ. ಕಾವೇರಿ ಅದೆಷ್ಟು ಕಾವೇರಿದ್ದಾಳೆ ಎಂಬ ಸತ್ಯ ಕರ್ನಾಟಕದ ಜನರಿಗೆ ಗೊತ್ತಿದೆ. ಈ ಎಲ್ಲ ನದಿಗಳು ತಮ್ಮ ಹರಿವನ್ನು ನಿಲ್ಲಿಸಿದರೆ ಅವಿಭಜಿತ ಭಾರತ ಬರಡಾಗುತ್ತದೆ! ಭಾರತ ಪಾಕಿಸ್ತಾನದ ಸಂಬಂಧವನ್ನು ನೆನೆಸಿಕೊಂಡಾಗಲೆಲ್ಲ ಆಕೆ ನೆನಪಾಗುತ್ತಾಳೆ. ಭಾರತದಲ್ಲಿಯೇ ಹುಟ್ಟಿ, ಭಾರತದಲ್ಲಿಯೇ ಬೆಳೆದು, ತನ್ನ ಜನ್ಮಭೂಮಿಗೂ ಒಂದಷ್ಟು ಕೊಡುಗೆಯನ್ನು ನೀಡಿ ಈಕೆ ಪಾಕಿಸ್ತಾನ ಸೇರುತ್ತಾಳೆ. ಅಲ್ಲಿನ ನೆಲಕ್ಕೊಂದಷ್ಟು ಕೊಡುಗೆಯನ್ನು ನಿಡುತ್ತಾಳೆ. ತನ್ನ ಬೆಳವಣಿಗೆಯ ಜೊತೆ ಜೊತೆಗೆ, ನಾಡಿಗೇ ಒಳಿತನ್ನು ಬಯಸುತ್ತಾಳೆ. ನಾಡನ್ನೂ ಬೆಳೆಸುತ್ತಾಳೆ. ಭಾರತದ ಮುಕುಟಮಣಿಗೆ ಸಿಂಗಾರವಾಗಿದ್ದಂಥ ಈಕೆ ಇಂದು ಸೊರಗಿದ್ದಾಳೆ. ಕ್ಷಯರೋಗಿಯಂತೆ ಕ್ಷೀಣಿಸುತ್ತಿದ್ದಾಳೆ. ಸಂಪೂರ್ಣ ಕ್ಷಯಿಸಿ, ಸಾವನ್ನಪ್ಪುವುದು ನಿಶ್ಚಿತವೋ ಎಂಬಂತೆ ಕುಗ್ಗಿ ಹೋಗಿದ್ದಾಳೆ. ಈಕೆ ಸಿಂಧು. ಭಾರತ-ಪಾಕಿಸ್ತಾನದ ಉತ್ತರದ ಭಾಗಗಳ ಜೀವಿಗಳಿಗೆ ಜೀವಜಲವನ್ನು ಕೊಟ್ಟು ದಾಹವನ್ನು ತೀರಿಸುವ ಈಕೆ ಇಂದು ತನ್ನ ದಾಹವನ್ನು ತೀರಿಸಿಕೊಳ್ಳಲು ಸಾಧ್ಯವಾಗದೇ ಒದ್ದಾಡುತ್ತಿದ್ದಾಳೆ. ಈಕೆಯ ಒಡಲಿಂದ ಅಮೃತ ಸಮಾನವಾದ ಜಲವನ್ನು ಹೀರುತ್ತಿರುವಂಥ ಮಾನವ ಆಕೆಗೆ ವಿಷವಿಕ್ಕುತ್ತ...