Posts

ಮಾನವ ವಲಸೆ ಬಂದ ಬಗೆ ಹೇಗೆ?

Image
ಲಕ್ಷಾಂತರ ವರ್ಷಗಳ ಹಿಂದೆ ನಾಗರಿಕತೆ ವಿಕಾಸಗೊಂಡು , ಬದುಕುವ ಕಲೆಯನ್ನು ವಿಭಿನ್ನವಾಗಿ ಮತ್ತು ವಿಶಿಷ್ಟವಾಗಿ ಬದಲಿಸಿಕೊಂಡ ಮಾನವ ತಾನಿದ್ದ ಜಾಗದಿಂದ ವಿವಿಧ ಪ್ರದೇಶಗಳಿಗೆ ವಲಸೆ ಹೋಗುವುದನ್ನು ಶುರು ಮಾಡಿದ . ಬದುಕಿನ ಚಿತ್ರಣವನ್ನು ಹಂತಹಂತವಾಗಿ ಬದಲಿಸಿಕೊಳ್ಳುತ್ತಾ , ಪ್ರಕೃತಿಯ ಜತೆಗಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುತ್ತಾ ಮುಂದೆ ಮುಂದಾ ಸಾಗಿ ಇಂದು ಪ್ರಕೃತಿಯನ್ನೇ ಧಿಕ್ಕರಿಸಿ ನಿಲ್ಲುವ ಮಟ್ಟಕ್ಕೆ ಬಂದಿದ್ದಾನೆ . ಯಾವುದೋ ಪ್ರದೇಶದ ಮೂಲನಿವಾಸಿಯಾಗಿದ್ದವ ಇಂದು ಮತ್ತಾವುದೋ ಪ್ರದೇಶ ಸೇರಿಕೊಂಡು ಅಲ್ಲಿ ತನ್ನ ವಂಶವೃಕ್ಷವನ್ನು ಬೆಳೆಸುತ್ತಿದ್ದಾನೆ . ಆರ್ಯರು , ದ್ರಾವಿಡರು ... ಕೂಡಾ ಒಂದು ಕಾಲದಲ್ಲಿ ವಲಸೆ ಬಂದವರೇ ! ಇದೆಲ್ಲ ಒತ್ತಟ್ಟಿಗಿರಲಿ , ಮಾನವ ವಲಸೆಯ ಇತಿಹಾಸವನ್ನು ಅಧ್ಯಯನ ಮಾಡುವುದಕ್ಕೆ ಈಗ ನಾಟಿಂಗ್‌ಹ್ಯಾಮ್ ಯೂನಿವರ್ಸಿಟಿಯ ವಂಶವಾಹಿ ತಜ್ಞರು ಸಂಶೋಧನೆ ಆರಂಭಿಸಿದ್ದು , ಬಸವನಹುಳುವಿನ ಮೂಲಕ ತಮ್ಮ ಗಮ್ಯ ತಲುಪುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ . ಫ್ರಾನ್ಸ್‌ನ ಪೈರೇನಿಯನ್ ಪ್ರದೇಶದಿಂದ ಐರ್ಲೆಂಡ್‌ಗೆ ಜನ ವಲಸೆ ಬಂದದ್ದು ಹೇಗೆಂಬುದನ್ನು ಸದ್ಯಕ್ಕೆ ಅಧ್ಯಯನ ಮಾಡುತ್ತಿದ್ದಾರೆ .

ಜೀವಾಂಶ ಭೂಮಿಗೆ ಬಂದದ್ದು ಬಾಹ್ಯದಿಂದ

Image
ವೈಜ್ಞಾನಿಕ ಜಗತ್ತಿನಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ಭಾರೀ ಕುತೂಹಲ , ಅದೊಂಥರಾ ಸೂಕ್ಷ್ಮ , ಅದೊಂದು ರೀತಿಯ ಗಾಂಭೀರ್ಯ , ಸ್ವಲ್ಪ ಅಚ್ಚರಿ , ಹೊಸ ಹೊಸ ಅನ್ವೇಷಣೆಗಳಿಗೆ ತುಡಿತ . ವಿಜ್ಞಾನವೇ ಹಾಗೆ , ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ , ಒಂದು ಕ್ಷಣ ಹೊಸದೆನೆಸಿದ್ದು ಮರುಕ್ಷಣದಲ್ಲಿ ಹಳತಾಗುತ್ತದೆ , ಮತ್ತೊಂದು ಹೊಸ ವಿಚಾರ ಕಾಣಿಸಿಕೊಂಡಿರುತ್ತದೆ . ವೈಜ್ಞಾನಿಕ ವಲಯದಲ್ಲಿ ಅತಿ ಹೆಚ್ಚು ಕುತೂಹಲ ಮೂಡಿರುವಂಥದ್ದು ಭೂಮಿಯಲ್ಲಿ ಜೀವಸೃಷ್ಟಿ ಹೇಗಾಯ್ತು ಎಂಬ ವಿಚಾರದ ಸುತ್ತ . ಭೂಮಿಯಲ್ಲಿನ ಜೀವಸೃಷ್ಟಿ , ಜೀವಾಸ್ತಿತ್ವ ಮತ್ತು ಜೀವ ವಿಕಾಸದ ಬಗ್ಗೆ ಒಬ್ಬೊಬ್ಬ ವಿಜ್ಞಾನಿ ಮಂಡಿಸಿದ ಒಂದೊಂದು ಸಿದ್ಧಾಂತಗಳು ಒಂದೊಂದು ವಿಚಾರವನ್ನು ಪ್ರತಿಪಾದಿಸುತ್ತವೆ . ಅವುಗಳದ್ದೇ ಆದ ನೆಲೆಯಲ್ಲಿ ಯೋಚಿಸಿದರೆ ಆ ಎಲ್ಲ ಸಿದ್ಧಾಂತಗಳೂ ಸರಿ ಎಂದೆನಿಸುತ್ತವೆ . ಅವುಗಳ ವಿರುದ್ಧವಾಗಿ ಯೋಚಿಸದರೆ ಆ ಯೋಚನೆಯೂ ಸರಿಯಾಗಿಯೇ ಭಾಸವಾಗುತ್ತದೆ . ಯಾಕೆಂದರೆ ಜೀವಸೃಷ್ಟಿ ಹೀಗೇ ಆಯ್ತು ಎಂದು ಹೇಳುವುದಕ್ಕೆ ನಮ್ಮಲ್ಲಿ ಯಾವ ಆಧಾರವೂ ಇಲ್ಲ . ಇದೀಗ ಹೊಸದೊಂದು ಸಿದ್ಧಾಂತ ಮಂಡನೆಯಾಗಿದ್ದು , ಅದರ ಪ್ರಕಾರ ಭೂಮಿಯಲ್ಲಿ ಜೀವಸೃಷ್ಟಿಗೆ ಕಾರಣವಾದ ಒಂದು ಅಂಶ ಬಂದದ್ದು ಉಲ್ಕೆಗಳಿಂದ . ಅದು ಗಂಧಕದ ಅಂಶ .

ಭಾವತೀವ್ರತೆ ಮಾನವನಿಗೆ ಮಾತ್ರವಲ್ಲ!

Image
ಸಿಕ್ಕಾಪಟ್ಟೆ ಸಿಟ್ಟು ಬಂದ ವ್ಯಕ್ತಿ ಕೈಗೆ ಸಿಕ್ಕಿದ್ದನ್ನು ಎತ್ತೆತ್ತಿ ಎಸೆಯುತ್ತಾನೆ . ಸಮಾಧಾನಪಡಿಸುವುದಕ್ಕೆ ಬಂದವರನ್ನೇ ಹೊಡೆದು ಕಳುಹಿಸುತ್ತಾನೆ . ಅದೇ ರೀತಿ ತುಂಬಾ ಸಂತೋಷದಿಂದಿರುವ ವ್ಯಕ್ತಿ ತಾನು ಏನು ಮಾಡುತ್ತಿದ್ದೇನೆ ಎಂಬುದನ್ನೇ ಮರೆತು ಖುಷಿಯಾಗಸದಲ್ಲಿ ತೇಲಾಡುತ್ತಾನೆ . ನೋವು ತುಂಬಿದ ಹೃದಯ ಮನುಷ್ಯನನ್ನು ಅನ್ಯಮನಸ್ಕನನ್ನಾಗಿಸುತ್ತದೆ .... ಅದೆಷ್ಟು ಭಾವಗಳು , ಅದೆಂಥ ತೀವ್ರತೆ ? ಒಂದೊಂದು ಭಾವಕ್ಕೆ ಒಂದೊಂದು ಪ್ರತಿಕ್ರಿಯೆ . ಪ್ರತಿಕ್ರಿಯೆಯ ತೀವ್ರತೆಯು ಭಾವನೆಗಳ ತೀವ್ರತೆಎ ನೇರಾನುಪಾತದಲ್ಲಿರುತ್ತದೆ . ಈ ಭಾವನೆಗಳು ಅನ್ನೋ ವಿಚಾರ ಎಷ್ಟೊಂದು ವಿಚಿತ್ರ ಅಲ್ವೇ ? ಮನುಷ್ಯ ಮಾತ್ರವಲ್ಲ , ಮನುಷ್ಯನ ಪೂರ್ವಜರು ಎನ್ನಿಸಿಕೊಂಡಂಥ ಚಿಂಪಾಂಜಿಗಳು , ಗೋರಿಲ್ಲಾಗಳು ಕೂಡಾ ಮಾನವನ ರೀತಿಯಲ್ಲೇ ಭಾವತೀವ್ರತೆಗೆ ಒಳಗಾಗುತ್ತವಂತೆ !

ಸಂಸ್ಕೃತಿಯ ಮೂಲ ಹವಾಮಾನ ವೈಪರೀತ್ಯ!

Image
ಮಾನವ ವಿಶಿಷ್ಟವಾದ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬಂದಿದ್ದಾನೆ . ಜಗತ್ತಿನ ಒಂದೊಂದು ಭಾಗದಲ್ಲಿ ಒಂದೊಂದು ಸಂಸ್ಕೃತಿ ಮನೆಮಾಡಿದೆ . ದೇಶ - ದೇಶಗಳ ಸಂಸ್ಕೃತಿಯಲ್ಲಿ ಬಹಳಷ್ಟು ವ್ಯತ್ಯಾಸವಿದೆ . ಒಂದು ಜಿಲ್ಲೆಯೇ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ರೀತಿಯ ಸಂಸ್ಕೃತಿ ಬೆಳೆದು ಬಂದಿರುವಂಥ ಸ್ಥಿತಿಯನ್ನೂ ಕಾಣಬಹುದು . ಆದರೆ ಇಂದಿನ ಯುಗದ ಮಾನವ ಬೆಳೆಸಿಕೊಂಡು ಬಂದಿರುವ ಈ ಸಂಸ್ಕೃತಿಗೆ ಕಾರಣವೇನು ಗೊತ್ತೇ ? ಹವಾಮಾನದಲ್ಲಾದಂಥ ವೈಪರೀತ್ಯ ! ಅಚ್ಚರಿಯಾಗುತ್ತದೆ ನಿಜ , ಹವಾಮಾನ ವೈಪರೀತ್ಯಕ್ಕೂ ಸಂಸ್ಕೃತಿಗೂ ಎತ್ತಣಿಂದೆತ್ತ ಸಂಬಂಧ ? ತಾಪಮಾನ ತೀವ್ರಗತಿಯಲ್ಲಿ ಏರಿಳಿತಗೊಳ್ಳುವುದರಿಂದ ಸಂಸ್ಕೃತಿಯಲ್ಲೇನಾದರೂ ಬದಲಾವಣೆಯಾಗುತ್ತದೆಯೇ ? ಹೌದು ಎನ್ನುತ್ತಿದ್ದಾರೆ ಬ್ರಿಟನ್‌ನ ಸಂಶೋಧಕರು . ಕಾರ್ಡಿಫ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಅರ್ಥ್ ಅಂಡ್ ಓಶಿಯನ್ ಸೈನ್ಸಸ್ , ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಮತ್ತು ಯೂನಿವರ್ಸಿಟಿ ಆಫ್ ಬಾರ್ಸಿಲೋನಾದ ಸಂಶೋಧಕರ ತಂಡ ನಡೆಸಿದ ಅಧ್ಯಯನದ ಪ್ರಕಾರ ಸಂಸ್ಕೃತಿಯಲ್ಲಿ ಮಹತ್ತರ ಬದಲಾವಣೆಯಾಗುವುದಕ್ಕೆ ಕಾರಣವಾದದ್ದು ಹವಾಮಾನದಲ್ಲಾದ ಹಠಾತ್ ವೈಪರೀತ್ಯ .

ಚರ್ಮಕೋಶದಿಂದ ಕಾಂಡಕೋಶ

Image
ದೇಹದ ಯಾವುದೇ ಭಾಗದ ಜೀವಕೋಶಗಳು ಅಭಿವೃದ್ಧಿಯಾಗುವುದು ಭ್ರೂಣದಲ್ಲಿರುವ ಶಿಶು ಹೊಂದಿರುವ ಕಾಂಡಕೋಶದಿಂದ . ಮಗು ಜನಿಸಿದ ತಕ್ಷಣ ಹೊಕ್ಕುಳಬಳ್ಳಿಯಿಂದ ಕಾಂಡಕೋಶವನ್ನು ತೆಗೆದು ಸಂಸ್ಕರಿಸಿಟ್ಟು , ಭವಿಷ್ಯದಲ್ಲಿ ದೇಹದ ಯಾವುದಾದರೂ ಭಾಗದ ಜೀವಕೋಶಗಳನ್ನು ಅಭಿವೃದ್ಧಿಪಡಿಸುವ ತಂತ್ರಜ್ಞಾನವನ್ನು ಈಗಾಗಲೇ ವೈಜ್ಞಾನಿಕ ಜಗತ್ತು ಅಭಿವೃದ್ಧಿಪಡಿಸಿದೆ . ಕಾಂಡಕೋಶದ ಮಹತ್ವವನ್ನು ಅರ್ಥ ಮಾಡಿಕೊಂಡಿರುವ ವಿಜ್ಞಾನಿಗಳು ಪ್ರಬುದ್ಧ ಮಾನವನ ದೇಹದಲ್ಲಿರುವ ಜೀವಕೋಶಗಳಿಂದ ಕಾಂಡಕೋಶವನ್ನು ಅಭಿವೃದ್ಧಿಪಡಿಸುವ ಪ್ರಯತ್ನವನ್ನು ಬಹಳ ವರ್ಷಗಳಿಂದ ಮಾಡುತ್ತಲೇ ಬಂದಿದ್ದರು . ಆ ಪ್ರಯತ್ನ ಈಗ ಸಾಕಾರಗೊಂಡಿದೆ . ಚರ್ಮದ ಕೋಶಗಳಿಂದ ಕಾಂಡಕೋಶ ಅಭಿವೃದ್ಧಿಪಡಿಸುವಲ್ಲಿ ಅಮೆರಿಕದ ಓರೆಗಾನ್ ಹೆಲ್ತ್ ಅಂಡ್ ಸೈನ್ಸ್ ಯೂನಿವರ್ಸಿಟಿ ಮತ್ತು ಓರೆಗಾನ್ ನ್ಯಾಷನಲ್ ಪ್ರೈಮೇಟ್ ರಿಸರ್ಚ್ ಸೆಂಟರ್‌ನ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ . ದೇಹದ ಯಾವುದೇ ಭಾಗ ಊನಗೊಂಡರೂ ಕಾಂಡಕೋಶ ಚಿಕಿತ್ಸೆಯ ಮೂಲಕ ಅದನ್ನು ಸರಿಪಡಿಸಬಹುದು . ಹೀಗಾಗಿ ಪ್ರಸ್ತುತ ನಡೆದಿರುವ ಸಂಶೋಧನೆ ವೈದ್ಯಕೀಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ಎಂದೇ ಹೇಳಬೇಕು .

ನಕ್ಷತ್ರ ಕಳೇಬರದಲ್ಲಿ ಗ್ರಹಕಸ!

Image
ಸೃಷ್ಟಿ , ಸ್ಥಿತಿ , ಲಯಗಳು ಜೀವಿಗಳ ಪಾಲಿಗೆ ಹೇಗೆ ಸಹಜ ಕ್ರಿಯೆಯೋ ಅದೇ ರೀತಿ ನಕ್ಷತ್ರಗಳ ಬದುಕಿನಲ್ಲೂ ಇವು ಸಾಮಾನ್ಯ ಸಂಗತಿಗಳು . ಒಂದು ನಕ್ಷತ್ರ ಹುಟ್ಟಿದ ಆರಂಭದಿಂದ ಮಹಾಸ್ಫೋಟವೆಂಬ ಕೊನೆಯ ಉಸಿರಿನವರೆಗೆ ನಕ್ಷತ್ರಜೀವನದಲ್ಲಿ ಎಂತೆಂಥ ಘಟನೆಗಳು ಸಂಭವಿಸುತ್ತವೆ ಎಂಬುದನ್ನು ವೈಜ್ಞಾನಿಕ ವಲಯ ಈಗಾಗಲೇ ಅರ್ಥ ಮಾಡಿಕೊಂಡಿದೆ . ಆದರೆ ನಕ್ಷತ್ರವೊಂದು ಮಹಾಸ್ಫೋಟಕ್ಕೆ ಒಳಗಾಗಿ ಕಪ್ಪುರಂಧ್ರವಾಗಿ ಮಾರ್ಪಟ್ಟ ಬಳಿಕ ಏನಾಗುತ್ತದೆ ? ಒಂದು ನಕ್ಷತ್ರ ಸಂಪೂರ್ಣ ಸತ್ತುಹೋದಾಗ ಏನಾಗುತ್ತದೆ ? ನಕ್ಷತ್ರಗಳ ಸಾವು ಎಂದರೇನು ? ಎಂಬೆಲ್ಲ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ವೈಜ್ಞಾನಿಕ ಜಗತ್ತು ನಿರಂತರವಾಗಿ ನಡೆಸುತ್ತಲೇ ಬಂದಿದೆ . ಅಚ್ಚರಿ ಎಂದರೆ , ಒಂದು ನಕ್ಷತ್ರ ಮಹಾಸ್ಫೋಟದೊಂದಿಗೆ ಕಪ್ಪುರಂಧ್ರವಾಗಿ ಬದಲಾಗುತ್ತದೆ . ಅಲ್ಲಿಗೆ , ಆ ನಕ್ಷತ್ರದಿಂದ ಬರುವ ಬೆಳಕು ಸ್ಥಗಿತಗೊಳ್ಳುತ್ತದೆ . ಇದು ನಕ್ಷತ್ರ ಸಂಪೂರ್ಣಸಾವಿನ ಸ್ಥಿತಿ ಎನ್ನಬಹುದು . ಆದರೆ ಈ ಹಂತಕ್ಕೂ ಒಂದೆರಡು ಹಂತ ಮೊದಲೇ ನಕ್ಷತ್ರ ವಿಚಿತ್ರಮರಣವನ್ನಪ್ಪುತ್ತದೆ . ಅದುವೇ ಶ್ವೇತಕುಬ್ಜ ಸ್ಥಿತಿ . ಕೆಂಪುದೈತ್ಯವಾಗಿ ಬೆಳೆದ ನಕ್ಷತ್ರವೊಂದು ತನ್ನ ಹೊರಕವಚವನ್ನು ಕಳಚಿಕೊಂಡು , ಗಾತ್ರದಲ್ಲಿ ಸಣ್ಣದಾಗಿ , ರಾಶಿಯಲ್ಲಿ ಭಾರವಾಗುವ ಸ್ಥಿತಿಯೇ ಶ್ವೇತಕುಬ್ಜಾವಸ್ಥೆ . ಇದು ಒಂದು ರೀತಿಯಲ್ಲಿ ನಕ್ಷತ್ರದ ಸಾವೇ ಸರಿ !

ಹೂಗಳಿಗೆ ಆಕಾರ ಕೊಡುವವರಾರು?

Image
ಗುಲಾಬಿ ಹೂವಿನ ದಳಗಳು ಚೂಪಾಗಿರುತ್ತವೆ , ಸಂಪಿಗೆಯ ದಳಗಳೂ ಕತ್ತಿಯ ಅಲಗಿನಂತಿರುತ್ತವೆ , ದಾಸವಾಳದ ದಳಗಳದ್ದು ದುಂಡನೆಯ ಆಕಾರ .... ಇದೆಲ್ಲ ನಿಜ , ಆದರೆ ಇವುಗಳಿಗೆ ಇಂಥದ್ದೇ ಆಕಾರಗಳು ಬಂದದ್ದಾದರೂ ಹೇಗೆ ? ಆಕಾರ ಕೊಟ್ಟವರು ಯಾರು ? ಮೇಲ್ನೋಟಕ್ಕೆ ಅತ್ಯಂತ ಸರಳ , ಕ್ಷುಲ್ಲಕ ವಿಚಾರ ಎನಿಸಿದರೂ ವೈಜ್ಞಾನಿಕ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆಯೊಂದಕ್ಕೆ ಇದು ಕಾರಣೀಭೂತವಾಗಿದೆ . ಮೊಗ್ಗು ಬೆಳೆಯುವ ಹಂತದಲ್ಲೇ ಅದರಳೊಗೆ ವಿಶೇಷ ಬಯೋಲಾಜಿಕಲ್ ಮ್ಯಾಪ್ ( ಜೈವಿಕ ನಕಾಶೆ ) ಇರುತ್ತದಂತೆ . ಈ ಕಾರಣದಿಂದಾಗಿ ಹೂವಿನ ದಳಗಳಿಗೆ ನಿಗದಿತ ಆಕಾರ ಬರುತ್ತದೆ . ಬ್ರಿಟನ್‌ನ ಜಾನ್ ಇನ್ನೆಸ್ ಸೆಂಟರ್ ಮತ್ತು ಯೂನಿವರ್ಸಿಟಿ ಆಫ್ ಈಸ್ಟ್ ಏಂಜಲಿಯಾದ ವಿಜ್ಞಾನಿಗಳು ಈ ಸಂಶೋಧನೆ ನಡೆಸಿದ್ದು , ಹೂವಿನ ದಳಗಳು ಮಾತ್ರವಲ್ಲದೆ , ಎಲೆಗಳು ಕೂಡಾ ನಿಗದಿಜ ಜೈವಿಕ ನಕಾಶೆಯಿಂದಲೇ ನಿಯಂತ್ರಿಸಲ್ಪಡುತ್ತವೆ ಎಂಬುದನ್ನು ಕಂಡುಕೊಂಡಿದ್ದಾರೆ .