ಮಾತಾಡು ಓ ಶಂಕರ
(ಸದಾ ಧ್ಯಾನಸ್ಥನಾಗಿರುವ ಸದಾಶಿವ ಶಂಕರನನ್ನು ಮಾತಿಗೆಳೆಯುವ ಈ ಕೀರ್ತನೆಯ ಸುಮಧುರ ಗಾಯನ ಕೇಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ....
ಮಾತು ಮರೆತೆ ಏಕೆ ಶಂಕರ
ಬಕುತ ಮನದಿ ನಟನವಾಡಿ ನಿರಂತರ ||ಪ||
ಗಿರಿಜೆ ಕೂಡಿ
ಸರಸವಾಡಿ
ತಿರುಗಿ ಕುಳಿತು
ತಪವ ಮಾಡಿ ಶಿವನೆ – ಮಾತು ಮರೆತೆ ||೧||
ಗಂಗೆ ಜಲದಲಿ
ಮಿಂದು ಬಂದು
ಚೆಂದದಿಂದಲಿ ರಮೆಯ
ಕಂಡು ಹರನೆ – ಮಾತು ಮರೆತೆ ||೨||
ಶೂಲ ಸೆಳೆದು
ಬಾಲ ಗಣಪನ
ಶಿರವ ತರಿಯೆ
ನೋವಿನಿಂದ – ಮಾತು ಮರೆತೆ ||೩||
ಶೂರ ಶರವಣ
ಅರಿಯ ಬಡಿದು
ಗೆಲುವ ಬೀರಿ
ಹರುಷದಿಂದ – ಮಾತು ಮರೆತೆ ||೪||
ಮಸಣ ಬಸುಮ
ಹಣೆಗೆ ಇರಿಸಿ
ರುದಿರ ನಯನ
ಮಾಲೆ ಧರಿಸಿ – ಮಾತು ಮರೆತೆ ||೫||
ನಂದಿ ವಾಹನ
ಏರಿ ಕುಳಿತು
ಲಯದ ಕೆಲಸಕೆ
ಲೋಕ ತಿರುಗಿ – ಮಾತು ಮರೆತೆ ||೬||
ಹರಿ ತಾನೊಂದೆನುತ
ಶೇಷಶಯನನಲಿ
ಲೀನ ತಾನಾಗಿ
ಬಿಂಕದಲಿ ಹರ – ಮಾತು ಮರೆತೆ ||೭||
ಹವನದುರಿಯಲಿ
ದಹಿಸಿಕೊಂಡ
ಸತಿಯ ನೆನೆದು
ಕೂಗಿ ಕರೆದು – ಮಾತು ಮರೆತೆ ||೮||
ಮದನ ಬಾಣ
ಎದೆಗೆ ಇರಿಯೆ
ಕೆಂಡ ನಯನ
ಬೀರಿ ಕೊಂದು – ಮಾತು ಮರೆತೆ ||೯||
ಹಿಮದ ಗಿರಿಯ
ತುದಿಯಲೊಂದು
ಮನೆಯ ಮಾಡಿ
ಶೂಲಪಾಣಿ – ಮಾತು ಮರೆತೆ ||೧೦||
ಕೊರಳ ಮಾಲೆಗೆ
ಹಾವ ಧರಿಸಿ
ಶಶಿಯ ಕರೆದು
ಶಿರದಲಿರಿಸಿ – ಮಾತು ಮರೆತೆ ||೧೧||
ಬೊಗಸೆ ಹಿಡಿದು
ವಿಷವ ಕುಡಿದು
ಜಗದ ಅಳಿವು
ತಡೆದು ಹರನೆ – ಮಾತು ಮರೆತೆ ||೧೨||
ಪಾಪ ಕಳೆದು
ಲೋಕ ಬೆಳಗಿ
ಲಿಂಗವಾಗಿ
ಜಂಭದಿಂದ – ಮಾತು ಮರೆತೆ ||೧೩||
ಗಾನ ಕೇಳಿ
ಪದಪದಕೆ ನಲಿದು
ಒಲುಮೆಯಿಂದ
ಪಯಣಿಗನ ಹರಸಿ – ಮಾತು ಮರೆತೆ ||೧೪||
- ಪ್ರಕಾಶ ಪಯಣಿಗ
Comments
Post a Comment