ಆಯುರ್ವೇದವನ್ನು ಕಂಡರೆ ಪಾಶ್ಚಾತ್ಯರಿಗೆ ಭೀತಿ!


ಇಂಗಿಷ್ ವೈದ್ಯ ಪದ್ಧತಿಯು ಯಾವುದೇ ರೋಗವನ್ನು ಸಂಪೂರ್ಣ ಗುಣ ಮಾಡುವುದಿಲ್ಲ. ರೋಗದ ಲಕ್ಷಣಗಳನ್ನು ತಟಸ್ಥಗೊಳಿಸುವ ಮೂಲಕ ಆ ರೋಗವನ್ನು ಅಜ್ಞಾತವಾಗಿಡುತ್ತದೆ ಅಷ್ಟೆ. ಗುಳಿಗೆಗಳು ರೋಗಲಕ್ಷಣಗಳನ್ನು ತಟಸ್ಥವಾಗಿಸುವ ಕಾರಣ ರೋಗ ಗುಣವಾಗಿದೆ ಎಂಬ ಭ್ರಾಂತಿಗೊಳಗಾಗುತ್ತೇವೆ.  ಆದರೆ ಆಯುರ್ವೇದ ವೈದ್ಯ ಪದ್ಧತಿ ಹಾಗಲ್ಲ, ರೋಗಮೂಲ ಏನು ಎಂಬುದನ್ನು ಅರಿತುಕೊಂಡು ಅದಕ್ಕೆ ಚಿಕಿತ್ಸೆ ಮಾಡುತ್ತದೆ. 

`ಅದ್ಯಾವುದೋ ಬೇರಂತೆ, ನಾರಂತೆ, ಸೊಪ್ಪು, ಎಲೆ, ಬಳ್ಳಿಯಿಂದಾನೂ ಔಷಧಿ ಕೊಡ್ತಾರಂತೆ, ಹಣ್ಣೂ ಮದ್ದಂತೆ, ಕಾಯಿಯೂ, ಕಾಯಿಯೊಳಗಿನ ಬೀಜವೂ ರೋಗ ನಿವಾರಕವಂತೆ. ಹಲವು ಮೂಲಿಕೆಗಳನ್ನು ಸೇರಿಸಿ ಔಷಧಿ ಮಾಡೋದಂತೆ. ಇದನ್ನೆಲ್ಲ ನಂಬ್ತೀರಾ? ಇದು ಮೂಢನಂಬಿಕೆ. ಇಂಥದ್ದನ್ನೆಲ್ಲ ತಿಂದು ಆರೋಗ್ಯ ಹಾಳು ಮಾಡ್ಕೋಬೇಡಿ' ಎಂದು ಭಾರತೀಯ ವೈದ್ಯ ಪದ್ಧತಿಯ ಬಗ್ಗೆ ಮೂಗು ಮುರಿದದ್ದು ಪಾಶ್ಚಾತ್ಯರು. `ನಿಮ್ಮ ವೈದ್ಯ ಪದ್ಧತಿ ಆಧಾರವಿಲ್ಲದ್ದು, ಅದನ್ನೆಲ್ಲ ಒಪ್ಪುವುದಕ್ಕೆ ಸಾಧ್ಯವಿಲ್ಲ' ಎಂದು ಕೆಲವು ಸಮಯದ ಹಿಂದೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ದೇಶದಲ್ಲಿ ಈ ವೈದ್ಯ ಪದ್ಧತಿಗೆ ಪ್ರೋತ್ಸಾಹ ನೀಡದಿರುವಂತೆ ಹೇಳಿದ್ದರು. ಬ್ರಿಟನ್ ಕೂಡಾ ಆಯುರ್ವೇದ ವೈದ್ಯ ಪದ್ಧತಿಯ ಮೇಲೆ ನಿಷೇಧ ಹೇರಿತು. ಇದೀಗ ಆಯುರ್ವೇದ ವೈದ್ಯ ಪದ್ಧತಿಯ ಮೇಲೆ ಮತ್ತೊಂದು ನಿಷೇಧ! ಅದು ಐರೋಪ್ಯ ಒಕ್ಕೂಟದಿಂದ. ಮೇ 1ರಿಂದ ಈ ಔಷಧ ಪದ್ಧತಿಯನ್ನು, ಗಿಡಮೂಲಿಕೆಗಳ ಮಾರಾಟವನ್ನು ಐರೋಪ್ಯ ರಾಷ್ಟ್ರಗಳಲ್ಲಿ ನಿಷೇಧಿಸಲಾಗಿದೆ.
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಮೇಲೆ ನಿಷೇಧ ಹೇರಲಾಗಿದೆ ಎಂದರೆ ಅದರ ಅರ್ಥವೇನು? ಆಯುರ್ವೇದ ವೈದ್ಯ ಪದ್ಧತಿಯಲ್ಲಿ ದೋಷಗಳಿವೆ ಎಂಬುದಂತೂ ಅಲ್ಲ. ಈ ಪದ್ಧತಿಗೆ ಆಧಾರವಿಲ್ಲವೆಂಬುದೂ ಅಲ್ಲ. ಮೂಢನಂಬಿಕೆ ಎಂಬುದಂತೂ ಅಲ್ಲವೇ ಅಲ್ಲ. ಇದರ ಹಿಂದಿರುವ ವಾಸ್ತವ ಕಾರಣ- ಭೀತಿ! ಆಯುರ್ವೇದ ವೈದ್ಯ ಪದ್ಧತಿಯ ಸಾಮಥ್ರ್ಯದ ಮುಂದೆ ತಮ್ಮ ವೈದ್ಯ ಪದ್ಧತಿಗೆ ಎಲ್ಲಿ ನೆಲೆಯಿಲ್ಲದಂತಾಗುತ್ತದೆಯೋ ಎಂಬ ಆತಂಕ. ಜನರೆಲ್ಲ ಆಯುರ್ವೇದದ ಮೊರೆ ಹೊಕ್ಕರೆ ತಮ್ಮಲ್ಲಿನ ವೈದ್ಯ ಪದ್ಧತಿಯ ಮಾರುಕಟ್ಟೆ ಕುಸಿದು ಬೀಳುತ್ತದೆ ಎಂಬ ಭಯ!
`ಚಿಕಿತ್ಸೆ ಬೇಕಾದದ್ದು ರೋಗಕ್ಕಲ್ಲ. ರೋಗಮೂಲಕ್ಕೆ' ಎಂದು ಸಾರುತ್ತಾ ಸಾವಿರಾರು ವರ್ಷಗಳಿಂದ ಜನರಿಗೆ ಸಂಜೀವಿನಿಯಾಗಿದ್ದ ಆಯುರ್ವೇದ ಒಂದು ಹಂತದಲ್ಲಿ ತನ್ನ ಛಾಪು ಕಳೆದುಕೊಂಡಿದ್ದು ನಿಜ. ಹಾಗಂತ ಅತ್ಯುನ್ನತ ಸ್ಥಾನಕ್ಕೆ ತನ್ನ ಶಕ್ತಿಯಿಂದಲೇ ಏರಿದ್ದಂಥ ವೈದ್ಯ ಪದ್ಧತಿಯ ಮೇಲೆ ಎಷ್ಟು ಕಾಲ ಕತ್ತಲೆ ಇರಲು ಸಾಧ್ಯ? ರಾತ್ರಿ ಕಳೆದ ಮೇಲೆ ಸೂರ್ಯೋದಯವಾಗಲೇಬೇಕು. ಅಂತೆಯೇ ಆಯುರ್ವೇದದ ಕತ್ತಲೆ ಸರಿಯಿತು. ಭಾರತಕ್ಕಷ್ಟೇ ಸೀಮಿತವಾಗಿದ್ದ ವೈದ್ಯ ಪದ್ಧತಿ ಜಗದ್ವ್ಯಾಪಿಯಾಯಿತು. ಅಮೆರಿಕ, ಬ್ರಿಟನ್, ಐರೋಪ್ಯ ರಾಷ್ಟ್ರಗಳು ಸೇರಿದಂತೆ ಜಗತ್ತಿನ ಮೂಲೆ ಮೂಲೆಯಲ್ಲಿ ಆಯುರ್ವೇದ ಪದ್ಧತಿ ಹರಡಿಕೊಂಡಿತು. ವಿವಿಧ ದೇಶಗಳಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಕಾಲೇಜುಗಳು ತೆರೆದುಕೊಂಡವು, ಕೋರ್ಸ್ ಗಳು ಆರಂಭವಾದವು. ವಿದ್ಯಾರ್ಥಿಗಳು ಸಾಲುಗಟ್ಟಿ ಆಯುರ್ವೇದ ವೈದ್ಯ ಪದ್ಧತಿ ಕಲಿಯುವುದಕ್ಕೆ ಬಂದರು.
ಈ ರೀತಿ ವಿದ್ಯಾರ್ಥಿಗಳು ಆಕರ್ಷಿತರಾಗುವುದಕ್ಕೆ ಕಾರಣವಾದದ್ದು ಜನಸಾಮಾನ್ಯರು. ಭಾರತಕ್ಕೆ ಪ್ರವಾಸಿಗರಾಗಿ ಬಂದ ವಿದೇಶಿಯರು ಇಲ್ಲಿನ ವೈದ್ಯ ಪದ್ಧತಿಯ ಲಾಭ ಪಡೆದು ಅದರ ವಿಚಾರವನ್ನು ತಮ್ಮ ದೇಶದಲ್ಲಿ ಪಸರಿಸಿದರು. ಅಡ್ಡಪರಿಣಾಮಗಳಿಲ್ಲದೆ. ರೋಗ ಮೂಲಕ್ಕೇ ಔಷಧಿ ಕೊಡುವ ಆಯುರ್ವೇದ ವಿದೇಶಿಯರಿಗೆ ಇಷ್ಟವಾದದ್ದರಲ್ಲಿ ಅಚ್ಚರಿಯೇನೂ ಇಲ್ಲ. ಕೇವಲ ಇಷ್ಟವಾಗುತ್ತಿದ್ದರೆ ಅಮೆರಿಕ, ಬ್ರಿಟನ್ ಮತ್ತು ಯೂರೋಪ್ ಸರ್ಕಾರಗಳು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆಯುರ್ವೇದ ಮತ್ತು ಇತರ ವೈದ್ಯ ಪದ್ಧತಿಗಳನ್ನು ಜನ ತಾಳೆಮಾಡಿ ನೋಡಿದರು. ರೋಗವನ್ನು ಸಂಪೂರ್ಣವಾಗಿ ವಾಸಿಮಾಡುವ ಆಯುರ್ವೇದದ ಗುಣ ಇಷ್ಟವಾಯಿತು. ಪೂರ್ಣವಾಗಿ ಆಯುರ್ವೇದಕ್ಕೇ ಒಗ್ಗಿಕೊಂಡರು ಪಾಶ್ಚಾತ್ಯ ಜನ. ಅಲ್ಲಿನ ಸರ್ಕಾರಗಳಿಗೆ ಸಮಸ್ಯೆಯಾದದ್ದೇ ಇದು.

ನಿಷೇಧದ ತಂತ್ರ
ಕೆಲವೊಂದು ಸಣ್ಣಪುಟ್ಟ ಮೂಲಿಕೆಗಳನ್ನು ಹೊರತುಪಡಿಸಿ ಉಳಿದೆಲ್ಲ ಮೂಲಿಕೆಗಳಿಗೆ ಐರೋಪ್ಯ ರಾಷ್ಟ್ರಗಳಲ್ಲಿ ಮೇ 1ರಿಂದ ನಿಷೇಧ ಜಾರಿಯಾಗಿದೆ. ಪರವಾನಗಿ ಇಲ್ಲದೆ ಈ ಮೂಲಿಕೆಗಳನ್ನು ಆಮದು ಮಾಡಿಕೊಳ್ಳುವುದಾಗಲೀ, ಮಾರಾಟ ಮಾಡುವುದಾಗಲೀ ನಿಷಿದ್ಧ. ಇನ್ನು ಪರವಾನಗಿ ಪಡೆದು ಮೂಲಿಕೆಗಳನ್ನು ಮಾರಾಟ ಮಾಡುತ್ತೇವೆಂದು ಹೊರಟರೆ ಪರವಾನಗಿ ಶುಲ್ಕ ಕಟ್ಟುವುದೇ ಸಾಧ್ಯವಾಗದಂಥ ಪರಿಸ್ಥಿತಿ. 80,000 ಪೌಂಡ್ ಗಳಿಂದ 1.2 ಲಕ್ಷ ಪೌಂಡ್ ಶುಲ್ಕ. ಅದೂ ನಿಗದಿತ ಅವಧಿಗೆ ಮಾತ್ರ. ಇಷ್ಟು ದೊಡ್ಡ ಮೊತ್ತವನ್ನು ಪರವಾನಿಗೆ ಶುಲ್ಕವಾಗಿ ಕಟ್ಟಿ ಔಷಧಿ ಮಾರಾಟ ಮಾಡುವುದು ಸಾಧ್ಯವೇ? ಅದರರ್ಥ ಆಯುರ್ವೇದ ಔಷಧಿಗಳು ಮಾರುಕಟ್ಟೆಗೇ ಬರಬಾರದು ಎಂಬುದು. `ಹಾವೂ ಸಾಯಬೇಕು, ಕೋಲೂ ಮುರಿಯಬೇಕು' ಎಂಬಂತೆ ಆಯುರ್ವೇದ ವೈದ್ಯ ಪದ್ಧತಿಯನ್ನು ದೂಷಿಸಿದಂತೆಯೂ ಆಗಬಾರದು, ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಬಳಸುವಂತ ಮೂಲಿಕೆಗಳನ್ನೂ ಜನ ಬಳಸಬಾರದು ಎಂಬುದು ಅಲ್ಲಿನ ಸರ್ಕಾರಗಳ ತಂತ್ರ.
ಕೆಲವೊಂದು ಮೂಲಿಕೆಗಳನ್ನು ಔಷಧಿ ಅಂಗಡಿಗಳಲ್ಲಿ ಸಂಗ್ರಹಿಸಿಡುವುದನ್ನೂ ನಿಷೇಧಿಸಲಾಗಿದೆ. ಬಹುತೇಕ ಕಳೆದ 30 ವರ್ಷಗಳಿಂದ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಬಳಕೆಯಲ್ಲಿರುವ ಆಯುರ್ವೇದ ವೈದ್ಯ ಪದ್ಧತಿಯ ಮೇಲೆ ನಿಷೇಧ ಹೇರಿದ್ದು, ಅಲ್ಲಿನ ಆಯುರ್ವೇದ ವೈದ್ಯರ ಮತ್ತು ಈ ವೈದ್ಯ ಪದ್ಧತಿಯನ್ನು ಅಭ್ಯಸಿಸುತ್ತಿರುವವರ ಆತಂಕಕ್ಕೆ ಕಾರಣವಾದದ್ದಂತೂ ದಿಟ. 1960ರ ದಶಕದಲ್ಲಿ ಯೂರೋಪ್ನಲ್ಲಿ ಗಿಡಮೂಲಿಕೆಗಳ ಬಳಕೆ ಶುರುವಾದಾಗ ಅಲ್ಲಿನ ಸರ್ಕಾರಗಳು ಚಿಂತಿತವಾಗಿದ್ದವು. 1968ರ ಹೊತ್ತಿಗೆ ಔಷಧಿಗಳ ಕಾಯ್ದೆ ರಚಿಸಿ, ಆ ಕಾಲದಲ್ಲಿ ಯೂರೋಪ್ನಲ್ಲಿ ಲಭ್ಯವಿದ್ದ ಕೆಲವೇ ಕೆಲವು ಗಿಡಮೂಲಿಕೆಗಳ ಮೇಲೆ ನಿಯಂತ್ರಣ ಹೇರುವ ಪ್ರಯತ್ನ ಮಾಡಿದವು. ಆದರೆ ಜನ ಕೇಳಲಿಲ್ಲ. ಆಯುರ್ವೇದದ ಬಳಕೆ ಹೆಚ್ಚಿತು. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಎರಡು ವರ್ಷಗಳಲ್ಲಿ 60 ಲಕ್ಷಕ್ಕೂ ಅಧಿಕ ಯೂರೋಪಿಯನ್ನರು ಗಿಡಮೂಲಿಕೆಗಳನ್ನು ಬಳಸಿದ್ದಾರೆ.

ಆಯುರ್ವೇದದ ಮಹಿಮೆ
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಆಯುರ್ವೇದ ಔಷಧಿಗಳ ಮೇಲೆ ನಿಷೇಧ ಹೇರಿದ್ದರ ಮುಖ್ಯ ಕಾರಣವೇ ಈ ವೈದ್ಯ ಪದ್ಧತಿಯ ಮಹತ್ವ. ಇತರ ವೈದ್ಯ ಪದ್ಧತಿಗಳನ್ನು ಮೀರಿ ಬೆಳೆಯಬಲ್ಲ ಸಾಮಥ್ರ್ಯ. ಇದನ್ನು ಹಲವಾರು ಪಾಶ್ಚಾತ್ಯ ದೇಶಗಳ ವೈದ್ಯರೂ ಒಪ್ಪಿಕೊಳ್ಳುತ್ತಾರೆ. `ಆಯುರ್ವೇದ ಚಿಕಿತ್ಸಾ ಪದ್ಧತಿ ಏನೆಂಬುದು ಇತ್ತೀಚಿನ ದಿನಗಳಲ್ಲಿ ಸಾಬೀತಾಗುತ್ತಿದೆ. ಮುಂದೊಂದು ದಿನ ಈ ವೈದ್ಯ ಪದ್ಧತಿಯು ಎಲ್ಲಾ ಅಡೆ ತಡೆಗಳನ್ನು ಮೀರಿ ನಿಲ್ಲುವುದು ಖಂಡಿತ' ಎನ್ನುತ್ತಾರೆ ಸೌಥ್ಆಂಪ್ಟನ್ ಯೂನಿವರ್ಸಿಟಿಯ ಸಂಶೋಧಕ ಪ್ರೊ. ಜಾರ್ಜ್ ಲೆವಿಥ್.
ಇಂಗಿಷ್ ವೈದ್ಯ ಪದ್ಧತಿಯು ಯಾವುದೇ ರೋಗವನ್ನು ಸಂಪೂರ್ಣ ಗುಣ ಮಾಡುವುದಿಲ್ಲ. ರೋಗದ ಲಕ್ಷಣಗಳನ್ನು ತಟಸ್ಥಗೊಳಿಸುವ ಮೂಲಕ ಆ ರೋಗವನ್ನು ಅಜ್ಞಾತವಾಗಿಡುತ್ತದೆ ಅಷ್ಟೆ. ಆದರೆ ಆಯುರ್ವೇದ ವೈದ್ಯ ಪದ್ಧತಿ ಹಾಗಲ್ಲ, ರೋಗಮೂಲ ಏನು ಎಂಬುದನ್ನು ಅರಿತುಕೊಂಡು ಅದಕ್ಕೆ ಚಿಕಿತ್ಸೆ ಮಾಡುತ್ತದೆ. ಯಾವುದೇ ರೋಗ ಬಂದರೂ ಜ್ವರ ಬಂದೇ ಬರುತ್ತದೆ. ಜ್ವರ ಬಂದಿದೆ ಎಂದರೆ ದೇಹದ ಯಾವುದೋ ಕ್ರಿಯೆ ಸಮರ್ಪಕವಾಗಿಲ್ಲ ಎಂದೇ ಅರ್ಥ. ಹೀಗಾಗಿಯೇ ಆಯುರ್ವೇದೀಯ ಸಂಹಿತೆಗಳು ಜ್ವರವನ್ನು ಕಡಿಮೆ ಮಾಡುವುದರ ಬಗ್ಗೆ ಹೆಚ್ಚು ವಿವರಣೆಗಳನ್ನು ಕೊಡುತ್ತವೆ ಮತ್ತು ಒಬ್ಬ ವೈದ್ಯನಿಗೆ ಜ್ವರವನ್ನು ಕಡಿಮೆ ಮಾಡುವುದು ಹೇಗೆಂಬುದು ಗೊತ್ತಾದರೆ ಆತ ಯಾವ ರೋಗಕ್ಕಾದರೂ ಔಷಧಿ ಕೊಡಬಲ್ಲ ಎನ್ನುತ್ತವೆ. `ಆಯುರ್ವೇದ ಔಷಧಿಗಳ ಪರಿಣಾಮ ನಿಧಾನಗತಿಯದ್ದು' ಎಂಬ ಆರೋಪವೂ ಇದೆ. ಆದರೆ ಇದು ಶುದ್ಧ ಸುಳ್ಳು. ಒಂದು ರೋಗ ಪೂರ್ಣವಾಗಿ ವಾಸಿಯಾಗಬೇಕಾದರೆ ಎಷ್ಟು ಸಮಯ ಬೇಕಾಗುತ್ತದೆಯೋ ಅಷ್ಟನ್ನು ಮಾತ್ರ ಆಯುರ್ವೇದ ಔಷಧಿಗಳು ತೆಗೆದುಕೊಳ್ಳುತ್ತವೆ. ಇಂಗ್ಲಿಷ್ ವೈದ್ಯ ಪದ್ಧತಿಯಲ್ಲಿ ನೀಡುವ ಗುಳಿಗೆಗಳು ರೋಗಲಕ್ಷಣಗಳನ್ನು ತಟಸ್ಥವಾಗಿಸುವ ಕಾರಣ ರೋಗ ಗುಣವಾಗಿದೆ ಎಂಬ ಭ್ರಾಂತಿಗೊಳಗಾಗುತ್ತೇವೆ. ವಾಸ್ತವದಲ್ಲಿ ಆ ರೋಗ ಗುಣವಾಗಿರುವುದೇ ಇಲ್ಲ. ಇನ್ನು ಇಂಗ್ಲಿಷ್ ಔಷಧಿಯಿಂದ ಅಡ್ಡ ಪರಿಣಾಮಗಳು ಉಂಟಾದರೆ ಆಯುರ್ವೇದದಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಕಾರಣ ಒಂದು ಬಳ್ಳಿ, ಬೇರು, ಅಥವಾ ಎಲೆಗಳನ್ನು ಬಳಸುವಾಗ ಅದರಲ್ಲಿ ವಿವಿಧ ರೀತಿಯ ರಾಸಾಯನಿಕಗಳು ಅಡಕವಾಗಿರುತ್ತವೆ. ಒಂದು ರಾಸಾಯನಿಕ ರೋಗವನ್ನು ಕಡಿಮೆ ಮಾಡಿದರೆ ಇನ್ನೊಂದು ಆ ರಾಸಾಯನಿಕದ ಅಡ್ಡ ಪರಿಣಾಮವನ್ನು ತಡೆಯುತ್ತದೆ.  ಇದರಿಂದಾಗಿ ಜನರು ಆಯುರ್ವೇದ ವೈದ್ಯ ಪದ್ಧತಿಯಿಂದ ಆಕರ್ಷಿತರಾದರು. ಅಮೆರಿಕ, ಇಂಗ್ಲೆಂಡ್ ಮತ್ತು ಐರೋಪ್ಯ ರಾಷ್ಟ್ರಗಳ ಸರ್ಕಾರಗಳಿಗೆ ತಲೆನೋವಾಯಿತು. ತಮ್ಮಲ್ಲಿನ ವೈದ್ಯ ಪದ್ಧತಿಗೆ ಧಕ್ಕೆಯಾಗುತ್ತದೆಂದು ಬಗೆದು ಆಯುರ್ವೇದದ ಮೇಲೆ ನಿಷೇಧ ಹೇರಿದವು. ಆದರೆ ಇದು `ಭೂಮಿಗೆ ಬೆಳಕು ಕೊಡದಂತೆ ಸೂರ್ಯನನ್ನು ತಡೆಯಲು ಹೊರಟಂತಾದೀತು'! ಸಾವಿರಾರು ವರ್ಷಗಳಿಂದ ಜನಮಾನಸದಲ್ಲಿ ನೆಲೆಯೂರಿರುವ ಆಯುರ್ವೇದವನ್ನು, ಅದರ ಅಭಿವೃದ್ಧಿಯನ್ನು ತಡೆಯಲು ಸಾಧ್ಯವೇ?

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು